ಕೊರೋನ ರಾಷ್ಟ್ರೀಯ ವಿಪತ್ತಾಗಿ ಪರಿಣಮಿಸಿದ್ದು, ನೋಡಿಕೊಂಡು ಮೂಕಪ್ರೇಕ್ಷಕನಾಗಿ ಕುಳಿತುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಕಠಿಣ ಮಾತುಗಳಲ್ಲಿ ಕೇಂದ್ರಕ್ಕೆ ಹೇಳಿದೆ.
ಕೊರೋನ ಲಸಿಕೆ ಉತ್ಪಾದಿಸುವ ಕಂಪನಿಗಳು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ದರ ನಿಗದಿಪಡಿಸಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಅಲ್ಲದೆ, 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ವಿತರಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಏನು ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ರಾಜ್ಯ ಸರ್ಕಾರಗಳನ್ನು ಕೇಳಿರುವ ನ್ಯಾಯಪೀಠ, ಲಸಿಕೆಗೆ ದಿಢೀರ್ ಬೇಡಿಕೆ ಹೆಚ್ಚುವುದರಿಂದ ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನಿಸಿದೆ.
ದೇಶದಲ್ಲಿ ಆಕ್ಸಿಜನ್ಗೆ ಹಾಹಾಕಾರ ಎದ್ದಿರುವ ಹಿನ್ನೆಲೆಯಲ್ಲಿ ಪೂರೈಕೆ ಸುಗಮಗೊಳಿಸಲು ಏನು ಮಾಡುತ್ತೀರಿ ಎಂದು ಕೇಂದ್ರ ಸರ್ಕಾರದಿಂದ ಮಾಹಿತಿ ಕೋರಿದೆ. ಕೊರೋನ ಪ್ರಕರಣದಲ್ಲಿ ತನಗೆ ನೆರವು ನೀಡಲು ಹಿರಿಯ ವಕೀಲರಾದ ಜೈದೀಪ್ ಗುಪ್ತಾ ಹಾಗೂ ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದೆ. ಈ ಹಿಂದೆ ನೇಮಕಗೊಂಡಿದ್ದ ಹರೀಶ್ ಸಾಳ್ವೆ ಮರುದಿನವೇ ಹಿಂದೆ ಸರಿದಿದ್ದರು.
ಕೊರೋನ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ತಾನು ಕೆಲವು ದಿನಗಳ ಹಿಂದೆ ಹೇಳಿರುವುದು ಹೈಕೋರ್ಟ್ ಗಳ ಅಧಿಕಾರ ಮೊಟಕುಗೊಳಿಸುವುದಕ್ಕೆ ಅಲ್ಲ ಎಂದೂ ಸ್ಪಷ್ಟಪಡಿಸಿದೆ.
ಕೊರೋನ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದು ಹಾಗೂ ಅದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ರಾಜ್ಯಗಳ ಹೈಕೋರ್ಟ್ಗಳು ಕೂಡ ಕೊರೋನ ನಿಯಂತ್ರಣದ ಸಂಬಂಧ ಆದೇಶಗಳನ್ನು ಹೊರಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್, ಕೊರೋನ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದು ಹೈಕೋರ್ಟ್ ಗಳ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುವ ಯತ್ನ ಎಂದು ಕೆಲವು ಹಿರಿಯ ವಕೀಲರು ಹೇಳಿದ್ದರು. ಆ ಬಗ್ಗೆ ಸ್ಪಷ್ಟನೆ ನೀಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನಮ್ಮ ಆದೇಶವನ್ನು ಓದದೆಯೇ ಟೀಕಿಸಬಾರದು ಎಂದು ಹೇಳಿದ್ದರು.
ನ್ಯಾ. ಡಿ.ವೈ.ಚಂದ್ರಚೂಡ ಅವರ ಪೀಠ ಮತ್ತೊಮ್ಮೆ ಅದನ್ನೇ ಸ್ಪಷ್ಟಪಡಿಸಿದ್ದು, ರಾಜ್ಯಗಳಲ್ಲಿ ಕೊರೋನ ಪರಿಸ್ಥಿತಿ ನಿಯಂತ್ರಿಸುವ ಸಂಬಂಧ ಆದೇಶ ಹೊರಡಿಸಲು ನಮಗಿಂತ ಹೈಕೋರ್ಟ್ಗಳೇ ಹೆಚ್ಚು ಸಮರ್ಥವಾಗಿವೆ ಎಂದು ಹೇಳಿದೆ. ಕೆಲವೊಮ್ಮೆ ಅಂತರ್ರಾಜ್ಯ ಸಂಬಂಧಿ ವಿಚಾರಗಳಿದ್ದರೆ ನಾವು ನೆರವಿಗೆ ಬರುತ್ತೇವೆ. ಒಟ್ಟಿನಲ್ಲಿ ಕೊರೋನ ಬಿಕ್ಕಟ್ಟನ್ನು ನೋಡಿಕೊಂಡು ಮೂಕಪ್ರೇಕ್ಷಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.