ಆ ಹಾವು! ಅದನ್ನು ಕಂಡು ಜನ ಹೆದರುತ್ತಾರೆ. ಆದರೆ ಹಾವು ಕಟ್ಟಾ ನೈಷ್ಠಿಕ ಬ್ರಾಹ್ಮಣ. ಎಷ್ಟು ಸ್ವಚ್ಛ, ಎಷ್ಟು ಸುಂದರ! ಸ್ವಲ್ಪ ಕೊಳೆಯಿದ್ದರೂ ಅದಕ್ಕಾಗದು. ಕೊಳಕು ಸ್ವಯಂಘೋಷಿತ ಬ್ರಾಹ್ಮಣರೆಷ್ಟೊ ಜನ, ಕೊಳಕು ಹಾವೊ? ಛೆ!
ಏಕಾಂತವಾಸಿ ಋಷಿಯಂಥ ಪ್ರಾಣಿ ಇದು. ನಿರ್ಮಲ, ಸತೇಜ, ಮನೋಹರ ಹಾರದಂತಿರುವ ಈ ಹಾವಿಗೇಕೆ ಹೆದರಬೇಕು? ಅದನ್ನು ಪೂಜಿಸಬೇಕೆಂದು ನಮ್ಮ ಪೂರ್ವಜರು ಹೇಳಿದ್ದಾರೆ. ಸನಾತನ ಧರ್ಮದಲ್ಲಿ ಎಂಥೆಂಥ ಹುಚ್ಚ ರೀತಿ ಇವು, ಎಂದು ನೀವನ್ನಬಹುದು.
ನಾಗಪೂಜೆ ಮಾಡಬೇಕೆಂದು ಹೇಳಿದುದು ನಿಜ…… ಇದೇನು
ಹುಚ್ಚು ? ಕೊಂಚ ವಿಚಾರ ಮಾಡಿ ನೋಡಿ. ಶ್ರಾವಣಮಾಸದಲ್ಲಿ ಆ ಹಾವು ಅಥಿತಿಯಾಗಿ ನಮ್ಮ ಮನೆಗೆ ಬರುತ್ತದೆ. ಮಳೆಯ ನೀರಿನಿಂದ ಆ ಬಡಪಾಯಿಯ ಮನೆ ತುಂಬಿ ಹೋಗುತ್ತದೆ. ಇನ್ನೇನು ಮಾಡಬೇಕು ಅದು ?
ದೂರ ಏಕಾಂತದಲ್ಲಿರುವ
ಆ ಋಷಿ ನಿಮಗೆ ಸುಮ್ಮನೆ ಹೆಚ್ಚಿಗೆ ತೊಂದರೆ ಕೊಡಬಾರದೆಂದು ಕಟ್ಟಗೆಗಳ ಮಧ್ಯೆ ಬಿದ್ದುಕೊಂಡಿರುತ್ತದೆ. ಸಾಧ್ಯವಿದ್ದಷ್ಟು ಕಡಿಮೆ ಸ್ಥಳವನ್ನೇ ವ್ಯಾಪಿಸಿಕೊಳ್ಳುತ್ತದೆ. ಆದರೂ ನಾವು ದೊಣ್ಣೆ ಎತ್ತಿಕೊಂಡು ಧಾವಿಸುತ್ತೇವೆ. ಸಂಕಟಕ್ಕೊಳಗಾದ ಅಥಿತಿ ಮನೆಗೆ ಬಂದಾಗ ಅವನನ್ನು ಹೊಡೆಯಬೇಕೆ ನಾವು ?……
ಹಾವಿನಲ್ಲಿ ವಿಷವಿದೆ. ಮನುಷ್ಯನಲ್ಲಿ ವಿಷವಿಲ್ಲವೆ ? ಹಾವು ಕಚ್ಚಿದರೂ ಕ್ವಚಿತ್ತಾಗಿ ಬೇಕಂತಲೇ ಅದು ಕಚ್ಚುವುದಿಲ್ಲ. ನೂರರಲ್ಲಿ ೯೬ ಹಾವುಗಳಿಗೆ ವಿಷವಿಲ್ಲ.
ನಿಮ್ಮ ಹೊಲವನ್ನು ಅದು ಕಾಯುತ್ತದೆ. ಬೆಳೆಯನ್ನು ನಾಶಗೊಳಿಸುವ ಅಸಂಖ್ಯ ಹುಳಹುಪ್ಪಡಿಗಳನ್ನು ತಿಂದು ಅದು ಬದುಕುತ್ತದೆ. ಹಾವಿಲ್ಲದಿದ್ದಲ್ಲಿ ಬೆಳೆಯ ರಕ್ಷಣೆ ಅಸಾಧ್ಯ.
ಪರೋಪಕಾರಿ, ಶುದ್ಧ ತೇಜಸ್ವಿ, ಏಕಾಂತಪ್ರಿಯ ಆದ ಈ ಹಾವು ಭಗವತ್ ಸ್ವರೂಪಿ.
ನಮ್ಮ ದೇವತೆಗಳಲ್ಲೆಲ್ಲಾ ಒಂದಿಲ್ಲೊಂದು ಕಡೆ ಹಾವು ಇದ್ದೇ ಇದೆ.
ಗಣಪತಿಯ ಸೊಂಟಕ್ಕೆ ಹಾವು, ಶಂಕರನ ಕೊರಳಿಗೆ ಹಾವು, ಭಗವಾನ್ ವಿಷ್ಣುವಿಗಂತೂ ಹಾವೇ ಹಾಸುಗೆ! ಹಾವಿನಲ್ಲಿ ಭಗವಂತನ ಮೂರ್ತಿ ಪ್ರಕಟವಾಗಿರುವುದೆ
ಈ ಎಲ್ಲದರ ಭಾವಾರ್ಥ. ಹಾವಿನಲ್ಲಿ ಆ ಪರಮೇಶ್ವರನ ಪರಿಚಯ ಮಾಡಿಕೊಳ್ಳಿ.