ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ₹2.76 ಕೋಟಿ ಬೃಹತ್ ಹಗರಣ: ಮಾಜಿ ಬಿಬಿಎಂಪಿ ನಾಯಕ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು!
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹಗರಣ (Bengaluru West City Corporation Scam)
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ “ಇತರೆ ಸಾಮಾನ್ಯ ಅಥವಾ ತುರ್ತು ವೆಚ್ಚಗಳು” ಎಂಬ ಹೆಸರಿನಲ್ಲಿ ಸುಮಾರು ₹2,76,00,000/- (ಎರಡು ಕೋಟಿ ಎಪ್ಪತ್ತಾರು ಲಕ್ಷ ರೂಪಾಯಿ) ಗಳಷ್ಟು ಭಾರಿ ಮೊತ್ತದ ಹಣವನ್ನು ಲೂಟಿ ಮಾಡಿರುವ ಭೀಕರ ಭ್ರಷ್ಟಾಚಾರದ ಹಗರಣ ಬಯಲಾಗಿದೆ!
ಮಾಜಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಎನ್.ಆರ್. ಅವರು ದಾಖಲೆಗಳ ಸಮೇತ ಈ ಬೃಹತ್ ಹಗರಣವನ್ನು ಜಗಜ್ಜಾಹೀರುಗೊಳಿಸಿದ್ದು, ತಪ್ಪಿತಸ್ಥರ ವಿರುದ್ಧ ಲೋಕಾಯುಕ್ತ ಆಯುಕ್ತರಿಗೆ ಹಾಗೂ ಬಿಬಿಎಂಪಿ/ಜಿಬಿಎ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಅಸ್ತಿತ್ವದಲ್ಲೇ ಇಲ್ಲದ ಕಚೇರಿ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ!
ರಾಜ್ಯ ಸರ್ಕಾರವು ದಿನಾಂಕ 02/09/2025 ರಂದು ಹಳೆಯ ಬಿಬಿಎಂಪಿ ರದ್ದುಗೊಳಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದಡಿಯಲ್ಲಿ 5 ಹೊಸ ಪಾಲಿಕೆಗಳನ್ನು ರಚಿಸಿತ್ತು. ಈ ವೇಳೆ ಹಳೆಯ ಬಿಬಿಎಂಪಿಯ ‘ಕಾರ್ಯಪಾಲಕ ಅಭಿಯಂತರರು (ಯೋಜನೆ) ಪಶ್ಚಿಮ’ ಹುದ್ದೆಯು 01/09/2025 ಕ್ಕೆ ಕೊನೆಗೊಂಡಿತ್ತು.
ಆದರೆ ಕಳೆದ 11 ತಿಂಗಳಿನಿಂದ ಅಸ್ತಿತ್ವದಲ್ಲೇ ಇಲ್ಲದ ಈ ಹುದ್ದೆಯ ಹೆಸರಿನಲ್ಲಿ, ದಿನಾಂಕ 29/01/2026 ರಿಂದ 29/07/2026 ರವರೆಗಿನ ಕೇವಲ 06 ತಿಂಗಳ ಅವಧಿಯಲ್ಲಿ “ತುರ್ತು ವೆಚ್ಚಗಳು” (Contingency Charges) ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹2,61,63,634/- ಹಣವನ್ನು ಲೂಟಿ ಮಾಡಲಾಗಿದೆ!
ವಂಚನೆಯ ಮಾಸ್ಟರ್ ಪ್ಲಾನ್ – ಯಾರೆಲ್ಲ ಭಾಗಿ?
- ಮುನಿಯಪ್ಪ (ವಿಶೇಷ ವಿಭಾಗದ ಇಇ): ಹಿಂದಿನ ‘EE – Project (West)’ ಹುದ್ದೆಯನ್ನು ‘ವಿಶೇಷ ವಿಭಾಗದ ಕಾರ್ಯಪಾಲಕ ಅಭಿಯಂತರ’ ಎಂದು ಬದಲಾಯಿಸಿಕೊಂಡಿದ್ದ ಮುನಿಯಪ್ಪ (ದಿನಾಂಕ 31/07/2026 ರಂದು ನಿವೃತ್ತರಾಗಿದ್ದಾರೆ) ಈ ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
- ರವಿಕುಮಾರ್ N. (ಎಫ್ಡಿಎ): ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಉಪ ಹಣಕಾಸು ನಿಯಂತ್ರಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ (FDA) ಆಗಿರುವ ರವಿಕುಮಾರ್ ಎನ್., ತನ್ನ ಸೋದರ ಸಂಬಂಧಿಯ ಹೆಸರಿನಲ್ಲಿ M/s N.S. Enterprises ಮತ್ತು M/s N.S.R. Enterprises ಎಂಬ ಬೇನಾಮಿ ಸಂಸ್ಥೆಗಳನ್ನು ನಡೆಸಿ ಕೋಟ್ಯಂತರ ರೂಪಾಯಿ ನಕಲಿ ಬಿಲ್ ಜಮೆ ಮಾಡಿಸಿಕೊಂಡಿದ್ದಾನೆ.
- ಹೆಚ್ಚುವರಿ ಲೂಟಿ: ಇದೇ N.S.R. Enterprises ಹೆಸರಿನಲ್ಲಿ ಸಹಾಯಕ ಹಣಕಾಸು ನಿಯಂತ್ರಕರ ಕಚೇರಿಯ “ಗಣಕಯಂತ್ರಗಳ ದುರಸ್ತಿ ಮತ್ತು ಸಾಮಾನ್ಯ ವೆಚ್ಚ” ಎಂಬ ನೆಪದಲ್ಲಿ ಮತ್ತೆ ₹17,28,654/- ಲೂಟಿ ಮಾಡಿರುವುದು ಸಾಬೀತಾಗಿದೆ.
ಒಂಬತ್ತು ಕೋಟಿ ವಂಚಿಸಿದ್ದ ಸಂಸ್ಥೆಯಲ್ಲೇ ಮತ್ತೊಂದು ಸ್ಕ್ಯಾಮ್!
ಇದೇ M/s N.S. Enterprises ಸಂಸ್ಥೆಯು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದಲ್ಲಿ ಗಣಕಯಂತ್ರ ಹಾಗೂ ಪ್ರಿಂಟರ್ ಸರಬರಾಜು ಹೆಸರಿನಲ್ಲಿ ಸುಮಾರು ₹9 ಕೋಟಿ ವಂಚಿಸಿದೆ ಎಂದು ಕಳೆದ ವಾರವಷ್ಟೇ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈಗ ಅದೇ ಬೇನಾಮಿ ಸಂಸ್ಥೆಯ ಮೂಲಕ ಪಶ್ಚಿಮ ನಗರ ಪಾಲಿಕೆಯಲ್ಲೂ ಕೋಟ್ಯಂತರ ಹಣ ದೋಚಿರುವುದು ಬೆಳಕಿಗೆ ಬಂದಿದೆ.
ಲೋಕಾಯುಕ್ತ ಐಜಿಪಿಗೆ ದೂರು – ಕಠಿಣ ಕ್ರಮಕ್ಕೆ ಆಗ್ರಹ!
ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ನಕಲಿ ದಾಖಲೆ ಸೃಷ್ಟಿ ಹಾಗೂ ಸಾರ್ವಜನಿಕರ ತೆರಿಗೆ ಹಣ ವಂಚಿಸಿರುವ ನಿವೃತ್ತ ಇಇ ಮುನಿಯಪ್ಪ ಹಾಗೂ ಎಫ್ಡಿಎ ರವಿಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪಾಲಿಕೆಗೆ ವಂಚಿಸಿರುವ ₹2.76 ಕೋಟಿ ಹಣವನ್ನು ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ವಸೂಲಿ ಮಾಡಬೇಕೆಂದು ಎನ್.ಆರ್. ರಮೇಶ್ ಅವರು ಜಿಬಿಎ ಮುಖ್ಯ ಆಯುಕ್ತರು ಹಾಗೂ ಲೋಕಾಯುಕ್ತ ಐಜಿಪಿ (IGP) ಅವರನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.
