ಪ್ರತಿವರ್ಷ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವನ್ನು ಏಕೆ ಆಚರಿಸುತ್ತಾರೆ…?
ಅಂದು ಏಸುಕ್ರಿಸ್ತನ ಜನ್ಮದಿನ ಅದನ್ನು ಕ್ರಿಸ್ಮಸ್ ಎಂದು ಆಚರಿಸುತ್ತಾರೆ ಎನ್ನುವುದು ನಿಮ್ಮ ಉತ್ತರವಾಗಿದ್ದರೆ ಅದು ಖಂಡಿತವಾಗಿಯೂ ತಪ್ಪು ಉತ್ತರ…!
ಏಸುಕ್ರಿಸ್ತನ ಜನ್ಮ ದಿನಾಂಕವನ್ನು ನಿಖರವಾಗಿ ಎಲ್ಲಿಯೂ ನಮೂದಿಸಲಾಗಿಲ್ಲ..!
ಕ್ರಿಸ್ಮಸ್ ಹಬ್ಬದ ಬಗ್ಗೆ ಹಲವಾರು ವೈರುಧ್ಯಮಯ ಕಥೆಗಳಿದ್ದರೂ ಸಹ ಕ್ರಿಸ್ಮಸ್ ಹಬ್ಬವನ್ನು ಏಸುಕ್ರಿಸ್ತನ ಹೆಸರಿನಲ್ಲಿ ಆಚರಿಸುವುದು ಒಂದು ನಂಬಿಕೆ ಅಷ್ಟೇ…!
***
ಮಹಾತ್ಮ ಬಸವಣ್ಣನವರ ಜನ್ಮ ದಿನಾಂಕ ಯಾವುದು…?
ಸರಿ ಸುಮಾರು ಕ್ರಿಸ್ತಶಕ 1131 ರಿಂದ 1196 ರವರೆಗೆ ಬಸವಣ್ಣನವರ ಕಾಲಮಾನ ಎಂದು ಇತಿಹಾಸಕಾರರು ಅಂದಾಜು ಮಾಡುತ್ತಾರೆ ಮತ್ತು ಅವರ ನಿಖರವಾದ ಜನ್ಮದಿನ ಎಲ್ಲಿಯೂ ದಾಖಲಾಗಿಲ್ಲ..!
ಹಾಗಾದರೆ ವೈಶಾಖ ತೃತೀಯ ಮಹಾತ್ಮ ಬಸವಣ್ಣನವರ ಜನ್ಮದಿನ ಹೇಗಾಯಿತು..?
***
ಮೊದಲು ನಮ್ಮ ಜನರಿಗೆ ತಿಳುವಳಿಕೆಯೇ ಇರಲಿಲ್ಲ..!
ಬಸವ ಜಯಂತಿಯಂದು ಮನೆಯಲ್ಲಿದ್ದ ಗೋವುಗಳಿಗೆ ಶೃಂಗಾರ ಮಾಡಿ ಊರಿನಲ್ಲಿರುವ ಬಸವಣ್ಣನ ದೇವಸ್ಥಾನದ ಬಳಿ ಕರೆದುಕೊಂಡು ಬಂದು ದೇವಸ್ಥಾನದಲ್ಲಿರುವ ಬಸವಣ್ಣನಿಗೆ ಮತ್ತು ಗೋವುಗಳಿಗೆ ಪೂಜೆ ಮಾಡುತ್ತಿದ್ದರು..!
ಬಸವ ಜಯಂತಿ ಎಂದರೆ ಯಾವುದೋ ಕಲ್ಲು ಬಸವಣ್ಣನ ಜಯಂತಿಯಲ್ಲಾ ಅದು ಮಹಾತ್ಮ ಬಸವಣ್ಣನವರ ಹುಟ್ಟಿದ ಹಬ್ಬ..!
ಎಂದು ನಾವು ಜನರಿಗೆ ತಿಳಿಹೇಳಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದೇವೆ ಜೊತೆಗೆ ಬಸವ ಜಯಂತಿಯಂದು ಮಹಾತ್ಮ ಬಸವಣ್ಣನವರ ಭಾವ ಚಿತ್ರದ ಸಮೇತ ಒಂದು ಉತ್ಸವವನ್ನು ಮಾಡಿ, ವಚನಗಳನ್ನು ಹಾಡಿ ಮಹಾತ್ಮ ಬಸವಣ್ಣನವರ ಸಂದೇಶಗಳನ್ನು ಜನರಿಗೆ ತಲುಪಿಸುತಿದ್ದೇವೆ ಎಂದು ಐದಾರು ವರ್ಷಗಳ ಹಿಂದೆ ನನ್ನ ಆಫೀಸಿನಲ್ಲಿ ಕುಳಿತುಕೊಂಡು ಬಸವ ಜಯಂತಿಯಂದು ಅವರು ಮಾಡುವ ಕಾರ್ಯಕ್ರಮಗಳ ಬಗ್ಗೆ ನನ್ನ ಸ್ನೇಹಿತರೋಬ್ಬರು ಬಹಳ ಉತ್ಸಾಹದಿಂದ ಹೇಳುತ್ತಿದ್ದರು.
ಹೇಳುವುದಷ್ಟೇ ಅಲ್ಲದೆ ಅವರು ಬಹಳ ನಿಷ್ಠೆಯಿಂದ ಪ್ರತಿ ವರ್ಷ ಬಸವ ಜಯಂತಿಯಂದು ಬಹಳ ವಿಜೃಂಭಣೆಯಿಂದ ಬಸವ ಉತ್ಸವವನ್ನು ಮಾಡಿ, ಅದ್ಭುತವಾಗಿ ವಚನಗಳನ್ನು ಹಾಡಿ, ಹತ್ತಾರು ಶರಣರಿಗೆ ಸನ್ಮಾನವನ್ನು ಮಾಡಿ, ನೂರಾರು ಜನರಿಗೆ ದಾಸೋಹವನ್ನು ಏರ್ಪಡಿಸಿ ಮಹಾತ್ಮ ಬಸವಣ್ಣನವರ ಜಯಂತಿಯನ್ನು ಇಂದಿಗೂ ಬಹಳ ಜೋರಾಗಿ ಆಚರಿಸುತ್ತಾರೆ..!
ಅವರದು ಬಹಳ ಉನ್ನತವಾದ ಚಿಂತನೆ ಮತ್ತು ಅವರು ಹಮ್ಮಿಕೊಳ್ಳುವ ಉತ್ಸವ ಅವರಿಗೆ ಬಸವಣ್ಣನವರ ಮೇಲಿರುವ ಭಕ್ತಿ ಮತ್ತು ವಚನಗಳ ಮೇಲಿನ ಪ್ರೀತಿಯನ್ನು ತೋರಿಸಿದರೆ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಜನರನ್ನು ಒಗ್ಗೂಡಿಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ಅವಶ್ಯಕ ಕೂಡ.
ಹೀಗೆ ಬಹಳಷ್ಟು ಶರಣ ಬಂಧುಗಳು ಬಸವ ಜಯಂತಿಯನ್ನು ಬಸವಣ್ಣನವರ ಜಯಂತಿಯಾಗಿ ಮಾಡಿ ಅವರನ್ನು ಸಾಂಸ್ಕೃತಿಕ ನಾಯಕನೆಂದು ಬಿಂಬಿಸುತ್ತಾರೆ.
***
ಸಿಂಧೂ ನದಿ ನಾಗರಿಕತೆಯ ಮುಖ್ಯವಾದ ಒಂದು ಮೊಹರು ಪಶುಪತಿನಾಥ.
ಗೋವುಗಳನ್ನು ರಕ್ಷಿಸಿ ಪಾಲಿಸುವುದು ಕೇವಲ ಹಿಂದೂ ಧರ್ಮ ಅಥವಾ ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ
ನೈಲ್ ನದಿ ನಾಗರಿಕತೆಯಲ್ಲಿಯೂ ಸಹ ಗೋವುಳ ಪಾಲನೆಯನ್ನು ಮಾಡಿದ್ದಾರೆ.
ಮಹಾಭಾರತದಲ್ಲಿ ಯುದ್ಧ ಶುರುವಾಗುವುದೇ ಕೌರವರು ಗೋವುಗಳನ್ನು ಅಪಹರಿಸಿದಾಗ.
ತನ್ನ ತಂದೆ ಮುದಿ ಎತ್ತುಗಳನ್ನು ದಾನವಾಗಿ ಕೊಟ್ಟಿದ್ದನ್ನು ವಿರೋಧಿಸಿ ಯಮಧರ್ಮನ ಬಳಿಗೆ ಹೋದವನು ನಚಿಕೇತ.
ಆದರೆ ಗೋವುಗಳಿಗೆ ಭಯ ಭಕ್ತಿಯಿಂದ ಶಿವನ ವಾಹನ ನಂದಿ ಎನ್ನುವ ಸ್ಥಾನವನ್ನು ಕೊಟ್ಟು ಆ ನಂದಿಗೆ ಪ್ರತ್ಯೇಕ ದೇವಸ್ಥಾನಗಳನ್ನು ನಿರ್ಮಿಸಿ ಪೂಜೆಯನ್ನು ಮಾಡುವುದು ಮಾತ್ರ ಹಿಂದುಗಳೇ ಅದರಲ್ಲೂ ದಕ್ಷಿಣ ಭಾರತದಲ್ಲಿರುವ ಲಿಂಗಾಯಿತ ಸಮುದಾಯದವರು.
***
ಭೈರವಾಷ್ಟಮಿ, ನಾಗಪಂಚಮಿ, ಗಣೇಶಚತುರ್ಥಿಯ ಹಾಗೆಯೇ ಬಸವತೃತೀಯವೆಂದು ಇರಬೇಕು ಅನ್ನಿಸುತ್ತದೆ !? ಹಾಗಾಗಿಯೇ ದಕ್ಷಿಣ ಭಾರತದಲ್ಲಿರುವ ಲಿಂಗಾಯತ ಸಮುದಾಯದವರು ಬಸವತೃತೀಯದಂದು ಮಹಾತ್ಮ ಬಸವಣ್ಣನವರನ್ನು ನಂದಿಯ ಅವತಾರವೆಂದೆ ಬಹಳ ನಂಬಿಕೆಯಿಂದ ನಂದಿಯನ್ನು ಮತ್ತು ಮಹಾತ್ಮ ಬಸವಣ್ಣನವರನ್ನು ಸಮಾನ ಸ್ಥಾನದಲ್ಲಿಟ್ಟು ತಂಬಿಟ್ಟಿನ ಆರತಿ ಮತ್ತು ನೈವೇದ್ಯವನ್ನು ಮಾಡಿ ಬಸವ ಜಯಂತಿಯನ್ನು ಆಚರಿಸುತ್ತಾರೆ.
ಇಂದಿಗೂ ಕರ್ನಾಟಕದ ಬಹಳಷ್ಟು ಹಳ್ಳಿಗಳಲ್ಲಿ ಗೋವುಗಳನ್ನು ಶೃಂಗರಿಸಿ ಬಸವಣ್ಣನ ದೇವಸ್ಥಾನದ ಬಳಿ ಸಾಮೂಹಿಕವಾಗಿ ಕಲೆತು ಪೂಜೆ ಮಾಡಿ ನಂದಿದ್ವಜವನ್ನು ವಿಜೃಂಭಣೆಯಿಂದ ಕುಣಿಸಿ ಬಸವ ಜಯಂತಿಯನ್ನು ಆಚರಿಸುತ್ತಾರೆ
***
ಮೊದಲು ಬಸವಣ್ಣನವರು ವಿಶ್ವಗುರುವಾಗಿದ್ದರು, ನಂತರ ಅವರನ್ನು ಲಿಂಗಾಯಿತ ಧರ್ಮಕ್ಕೆ ಸೀಮಿತಗೊಳಿಸಿದರು ಇತ್ತೀಚೆಗೆ ಅವರನ್ನು ಕೇವಲ ಸಾಂಸ್ಕೃತಿಕ ನಾಯಕನೆಂದು ಬಿಂಬಿಸಿ, ಬಸವ ಜಯಂತಿಯಂದು ನಮ್ಮ ದಾರ್ಮಿಕ ಅಥವಾ ರಾಜಕೀಯ ನಾಯಕರು ಬಸವಣ್ಣನವರ ಪ್ರತಿಮೆಗೆ ಅಥವಾ ಅವರ ಭಾವ ಚಿತ್ರಕ್ಕೆ ಒಂದು ಹಾರವನ್ನು ಹಾಕಿ ಬಸವ ಜಯಂತಿ ಎನ್ನುವ ಕಾರ್ಯಕ್ರಮವನ್ನು ಮುಗಿಸುವ ಬದಲು ಗೋವುಗಳನ್ನು ಶೃಂಗರಿಸಿ ಬಸವಣ್ಣನ ದೇವಸ್ಥಾನದ ಬಳಿ ಸಾಮೂಹಿಕವಾಗಿ ಕಲೆತು ನಂದಿಯ ಪೂಜೆಯನ್ನು ಮಾಡಿ ನಂದಿದ್ವಜವನ್ನು ವಿಜೃಂಭಣೆಯಿಂದ ಕುಣಿಸಿ ಗೋವುಗಳ ಪೂಜೆ ಮಾಡುವುದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಅರ್ಥಪೂರ್ಣ.
ಗೋವುಗಳ ಪೂಜೆ ಅರ್ಥಹೀನ ಎನ್ನುವ ಗೋ ವಿರೋಧಿಗಳಿಗೆ ಮಹಾತ್ಮ ಬಸವಣ್ಣನವರು ಸದ್ಭುದ್ದಿಯನ್ನು ಕೊಟ್ಟು ಕಾಪಾಡಲಿ…!
ಬಸವ ಬಸವ ಎಂದವನ ಭಕ್ತಿ ನಿಶೂನ್ಯ ಕಾಣ……!