ಇತಿಹಾಸ ಕೆದಕಿದರೆ ಬೇಕಾದಷ್ಟು ಸಾಮ್ರಾಜ್ಯಗಳು, ರಾಜರ ಆಳ್ವಿಕೆ, ಧರ್ಮ ಪರಿಪಾಲನೆಗಳ ಕಥೆಗಳು ಸಿಗುತ್ತವೆ. ಕಾಲ ಕಳೆದಂತೆ ಅದೆಷ್ಟೋ ರಾಜರು ಆಳಿದರು, ಸಾಮ್ರಾಜ್ಯಗಳು ಉರುಳಿದವು. ಶತಮಾನಗಳ ನಂತರವೂ ಗತವೈಭವಕ್ಕೆ ಸಾಕ್ಷಿಎಂಬಂತೆ ನಿಶ್ಚಲವಾಗಿ ನಿಂತಿರುವುದು ಅಂದಿನ ಸ್ಮಾರಕಗಳು. ಅಂತೆಯೇ ಪ್ರಾಯಶಃ ೮/೯ ಶತಮಾನಗಳಿಂದಲೂ ಹಲವು ಆಳ್ವಿಕೆಗಳನ್ನು ಮತ್ತು ಯುದ್ದಗಳನ್ನು ನೋಡಿ, ಹಲವಾರು ರೂಪಾಂತರಗಳನ್ನು ಹೊಂದಿ ಇಂದಿಗೂ ಅಚಲವಾಗಿ ನಿಂತಿರುವುದು ಕ್ಯಾಂಬೋಡಿಯಾದ ಈ ದೇವಾಲಯ!
ಖ್ಮೇರ್ ಸಾಮ್ರಾಜ್ಯದ ದೊರೆ ಸೂರ್ಯವರ್ಮನ್ II ೧೨ನೇ ಶತಮಾನದ ಆರಂಭದಲ್ಲಿ ತನ್ನ ರಾಜಧಾನಿಯಾದ ಅಂಗ್ಕೊರ್ ನಲ್ಲಿ ವಿಷ್ಣುವಿಗಾಗಿ ಒಂದು ದೇವಾಲಯ ನಿರ್ಮಿಸಿ ಅದಕ್ಕೆ ‘ವರಃ ವಿಷ್ಣುಲೋಕ /ಪರಮ ವಿಷ್ಣುಲೋಕ’ ವೆಂದು ಹೆಸರಿಸಿದ. ೧೬೨.೬ ಹೆಕ್ಟಾರ್ನಲ್ಲಿ ನಿರ್ಮಿಸಿರುವ ಈ ದೇವಾಲಯ ಇಂದಿಗೂ ಪ್ರಪಂಚದಲ್ಲೇ ಅತಿ ದೊಡ್ಡ ಧಾರ್ಮಿಕ ಸ್ಮಾರಕ! ಕ್ಯಾಂಬೋಡಿಯಾದ ಸಿಯಾಮ್ ರೀಪ್ ನ ಭಾಗವಾಗಿರುವ ಈ ದೇವಾಲಯ ಈಗ ‘ಅಂಗ್ಕೊರ್ ವಾಟ್’ ಎಂದು ಪ್ರತೀತಿ ಹೊಂದಿದೆ. ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಮುಖ್ಯ ದೇವಸ್ಥಾನ ೫ ಗೋಪುರಗಳನ್ನು ಹೊಂದಿದ್ದು ಅವು ದೇವಾನುದೇವತೆಗಳ ನಿವಾಸವೆಂದು ಪುರಾಣ ಪ್ರಸಿದ್ದವಾದ ಸ್ಥಳ ಮೇರು ಪರ್ವತದ ೫ ಗಿರಿಗಳನ್ನಬಿಂಬಿಸುತ್ತವೆ ಎನ್ನುವುದು ಅಲ್ಲಿನ ನಂಬಿಕೆ. ಪುರಾಣ ಕಥೆಗಳ ಹಲವು ಪರಿಕಲ್ಪನೆಗಳು ಇಲ್ಲಿನ ವಾಸ್ತುಶಿಲ್ಪದ ಭಾಗವಾಗಿದೆ. ದೇವಸ್ಥಾನದ ಮುಖ್ಯ ಪ್ರವೇಶದ್ವಾರಕ್ಕೆ ತಲುಪುವ ದಾರಿಯ ಅಂಚುಗಳು ಶಿವನ ನಾಗಾಭರಣವಾದ ವಾಸುಕಿಯಿಂದ ಅಲಂಕೃತವಾಗಿದ್ದು, ಅದರ ಇಬ್ಬಗೆಗೂ ಬೃಹತ್ ಕಂದಕಗಳಿವೆ. ಮೇರು ಪರ್ವತ, ವಾಸುಕಿ ಮತ್ತು ಕಂದಕಗಳು ಇವೆಲ್ಲದರ ಒಟ್ಟಾರೆ ಚಿತ್ರಣ ಸಮುದ್ರ ಮಂಥನದ ಸಂಚಿಕೆಯನ್ನು ಕಣ್ಣಮುಂದಿರಿಸುತ್ತದೆ.
ಮಹಾಭಾರತ ಮತ್ತು ರಾಮಾಯಣದ ಯುದ್ಧ ಪ್ರಸಂಗ, ಜಟಾಯುವಿನ ಪ್ರಸಂಗ, ಹೀಗೆ ಪುರಾಣಗಳ ಹಲವು ದೃಶ್ಯಗಳು ದೇವಾಲಯದ ಗೋಡೆಗಳ ಮೇಲೆ ಕೆತ್ತನೆಯ ರೂಪ ತಾಳಿದೆ. ಪುರಾಣ ಕಥೆಗಳು ಮತ್ತು ಧಾರ್ಮಿಕ ನಂಬಿಕೆಗಳಷ್ಟೇ ಅಲ್ಲ, ಕೆಲವು ಖಗೋಳ ವಿಜ್ಞಾನದ ತತ್ವಗಳನ್ನು ಈ ದೇವಾಲಯದ ವಾಸ್ತು ಶಿಲ್ಪಿ ಬಿಂಬಿಸುತ್ತದೆ. ದೇವಾಲಯದ ೫ ಗೋಪುರಗಳು ಸೂರ್ಯ ಸಂಕ್ರಮಣದ ನಿರ್ದಿಷ್ಟ ಪಥದ ಅನುಗುಣವಾಗಿದೆ ಎಂದು ಮತ್ತು ಋತುವಿನುಗುಣವಾಗಿ ಸಮಯವನ್ನು ಲೆಕ್ಕಮಾಡಬಹುದು ಎಂಬುದು ಅಲ್ಲಿನವರ ನಂಬಿಕೆ ಅಷ್ಟೇ ಅಲ್ಲ ಖಗೋಳಶಾಸ್ತ್ರಜ್ಞರ ಸಂಶೋಧನಾ ವಸ್ತು.
ದೇವಸ್ಥಾನದ ಮಧ್ಯ ಭಾಗವು ಇಡೀ ಬ್ರಹ್ಮಾಂಡದ ಕೇಂದ್ರಬಿಂದು ಎನ್ನುವುದು ಇಲ್ಲಿಯ ಆಸಕ್ತಿಯುತವಾದ ಮತ್ತೊಂದು ನಂಬಿಕೆ. ಆರಂಭದಲ್ಲಿ ವಿಷ್ಣುವಿಗಾಗಿ ನಿರ್ಮಾಣವಾದ ಈ ದೇಗುಲ ೧೨ನೇ ಶತಮಾನ ಮುಗಿಯುವಷ್ಟರಲ್ಲಿ ಬೌದ್ಧ ಸನ್ಯಾಸಿಗಳ ಮಠವಾಗಿ ಬದಲಾಗಿತ್ತು. ಇಂದಿಗೂ ಬೌದ್ಧರ ಪ್ರಾರ್ಥನಾ ಸ್ಥಳವಾಗಿ ಉಳಿದಿದೆ. ಆದರೂ ಒಂದು ವಿಷ್ಣುವಿನ ವಿಗ್ರಹ ಇಂದಿಗೂ ದೇವಾಲಯದ ಭಾಗವಾಗಿದೆ. ನಂಬಿಕೆಗಳು ಏನೇ ಇರಲಿ ದೇವಸ್ಥಾನ ಒಂದು ಸುತ್ತು ಹಾಕಿದರೆ ಅದರ ಅಗಾಧತೆಗೆ ಮನಸ್ಸು ಬೆರಗಾಗುತ್ತದೆ, ದೇವಸ್ಥಾನ ಪೂರ್ಣಪ್ರಮಾಣವಾಗಿ ಬಳಸುತ್ತಿದಾಗ ಇದ್ದಿರಬಹುದ್ದಾದ ವೈಭವದ ಅರಿವಾಗುತ್ತದೆ.
ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆಯೆಂದರೆ, ಅದು ಸೂರ್ಯೋದಯದ ಸಮಯದಲ್ಲಿ ದೇವಾಲಯದ ಚಿತ್ರಣವನ್ನು ಕಣ್ತುಂಬಿಕೊಳ್ಳುವುದು. ದೇವಸ್ಥಾನದ ಮರೆಯಿಂದ ಉದಯವಾಗುವ ಸೂರ್ಯನ ಪ್ರಥಮ ಹೊಂಗಿರಣಗಳ ಆಗಮವಾಗುತ್ತಿದಂತೆಯೇ ಸುಂದರ ಚಿತ್ರವೊಂದು ರೂಪತಾಳುತ್ತದೆ . ತಾವರೆಗಳಿಂದ ತುಂಬಿದ ಆ ಕೊಳದ ಮುಂದೆ ನಿಂತು ಆ ದೃಶ್ಯವನ್ನು ಕಣ್ಣುತುಂಬಿಕೊಳ್ಳುವುದು ವರ್ಣಿಸಲಾಗದ ಅನುಭವ. ಮನಸ್ಸಿಗೆ ಏನೋ ಹಿತ. ಮನಸ್ಸು ಎಷ್ಟು ಪ್ರಶಾಂತವಾಗಿರುತ್ತದೆ ಎಂದರೆ ೨-೩ ಗಂಟೆಗಳ ಕಾಲ ಅಲ್ಲೇ ಅದ್ಯಾವುದೋ ಧ್ಯಾನದಲ್ಲಿರುವಂತೆ ಮೌನದಲ್ಲೇ ಕಳೆದುಬಿಡಬಹುದು! ಅವಕಾಶ ಸಿಕ್ಕರೆ ಈ ದೇವಾಲಯಕ್ಕೆ ಖಂಡಿತ ಭೇಟಿ ನೀಡಿ, ಸೂರ್ಯೋದಯದ ಅನುಭವವನ್ನು ಮಿಸ್ ಮಾಡ್ಕೋಬೇಡಿ.
– ಪ್ರತಿಭಾ ಚಂದ್ರಶೇಖರ್