ಇದೇ ಸೆಪ್ಟೆಂಬರ್ 18ಕ್ಕೆ ಡಾ.ವಿಷ್ಣುವರ್ಧನ್ ಅವರ 72ನೇ ಜನ್ಮದಿನವಿದ್ದು, ಈ ಪ್ರಯುಕ್ತ ಡಾ.ವಿಷ್ಣು ಸೇನಾ ಸಮಿತಿ ಮತ್ತು ಇತರೆ ಸೇನಾನಿಗಳು ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು ಇದೇ ಡಿಸೆಂಬರ್ 29ಕ್ಕೆ 50 ವರ್ಷಗಳಾಗಲಿವೆ. ಆ ಪ್ರಯುಕ್ತ ಸುಮಾರು 50 ಕಟೌಟ್ ಗಳನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿಲ್ಲಿಸಲಾಗುತ್ತಿದೆ. ಆ ಪ್ರತಿ ಕಟೌಟ್ ಸಹ ಡಾ.ವಿಷ್ಣು ಅವರ ಒಂದೊಂದು ಯಶಸ್ವಿ ಚಿತ್ರದ್ದಾಗಿರಲಿದೆ. ಈ ಕಟೌಟ್ ಗಳನ್ನು ರಾಜ್ಯದ ಬೇರೆ ಬೇರೆ ಭಾಗದ ಸುಮಾರು 50 ಅಭಿಮಾನಿಗಳು ಸೇರಿ ನಿರ್ಮಿಸುತ್ತಿದ್ದಾರೆ.
ಇಷ್ಟು ಕಟೌಟ್ ಗಳು ಇಡೀ ವಿಶ್ವದಲ್ಲಿಯೇ ಏಕಸ್ಥಳದಲ್ಲಿ ಯಾವೊಬ್ಬ ಕಲಾವಿದನ ಹೆಸರಲ್ಲೂ ಆಗಿಲ್ಲವಾದ್ದರಿಂದ ಈ ಕಟೌಟ್ ಜಾತ್ರೆಯನ್ನು ವಿಶ್ವದಾಖಲೆಯಾಗಿಸುವ ಹುರುಪಿನಲ್ಲಿದ್ದಾರೆ ವಿಷ್ಣು ಸೇನಾನಿಗಳು .
ಈ ಜಾತ್ರೆಯನ್ನು ವಿಶ್ವ ದಾಖಲೆಯಾಗಿಸುವ ಹಾದಿಯಲ್ಲಿ ಈಗಾಗಲೇ ದಾಖಲೆಗಳನ್ನು ರಿಜಿಸ್ಟರ್ ಮಾಡುವಂತಹ ಕೆಲವು ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ.
ಆದ್ದರಿಂದ ರಾಜ್ಯದಾದ್ಯಂತ ಇರುವ ಡಾ.ವಿಷ್ಣು ಅಭಿಮಾನಿಗಳು ಸೆಪ್ಟೆಂಬರ್ 18ರಂದು ಡಾ.ವಿಷ್ಣು ಪುಣ್ಯಭೂಮಿಯ ಬಳಿ ಆಗಮಿಸಬೇಕೆಂದು ವಿಎಸ್ ಎಸ್ ರಾಜ್ಯಾಧ್ಯಕ್ಷರಾದ ಶ್ರೀ ವೀರಕಪುತ್ರ ಎಂ ಶ್ರೀನಿವಾಸ್ ರವರು ಆತ್ಮೀಯ ಕರೆ ನೀಡಿದ್ದಾರೆ.
ಈ ಇಡೀ ಕಾರ್ಯಕ್ರಮದ ರೂವಾರಿಯಾದ ಶ್ರೀ ವೀರಕಪುತ್ರ ಎಂ ಶ್ರೀನಿವಾಸ್ ರವರಿಗೆ ನಮ್ಮ ಪತ್ರಿಕಾ ಬಳಗ ಅಭಿನಂದಿಸುತ್ತದೆ ಹಾಗೂ ಇಡೀ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಈ ಮೂಲಕ ಹಾರೈಸುತ್ತದೆ.